Seasonal Lifestyle: Healthy Foods to Eat During Summerಸಾಂದರ್ಭಿಕ ಚಿತ್ರ

ಗ್ರೀಷ್ಮಋತು: ಇದು ಮೇ ಮಧ್ಯಭಾಗದಿಂದ ಜುಲೈ ಮಧ್ಯದವರೆಗೂ ವಿಸ್ತರಿಸುತ್ತದೆ. ಈ ಋತುವಿನ ಪ್ರಭಾವ ಏಪ್ರಿಲ್ ಮಧ್ಯದಿಂದಲೇ ಪ್ರಾರಂಭವಾಗಿ ಮೇ ಹಾಗೂ ಜೂನ್ ತಿಂಗಳಲ್ಲಿ ತೀವ್ರವಾಗಿರುತ್ತದೆ.

ಈ ಕಾಲದಲ್ಲಿ ಸೂರ್ಯನ ಕಿರಣಗಳು ಅತ್ಯಂತ ಉಷ್ಣತೆಯಿಂದ ಕೂಡಿದ್ದು, ತೀಕ್ಷ್ಮವಾಗಿರುತ್ತವೆ. ಹಾಗಾಗಿ ಇದು ವಾತಾವರಣದ ತೇವಾಂಶವನ್ನೆಲ್ಲ ಹೀರಿ ಒಣಗಿಸುತ್ತದೆ. ಈ ಋತುವಿನ ಪ್ರಭಾವ ಅತ್ಯಂತ ರೂಕ್ಷ, ಕಟು, ಪಿತ್ತಕಾರಕ ಹಾಗೂ ಕಫನಾಶಕವೆಂದು ಆಯುರ್ವೇದ (Ayurveda) ಗ್ರಂಥಗಳಲ್ಲಿ ವರ್ಣಿಸಲಾಗಿದೆ. ಈ ಋತುವಿನಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಆಯುರ್ವೇದ ವೈದ್ಯರು ತಿಳಿಸಿದ್ದಾರೆ.

  • ಸಿಹಿ, ಶೀತ ಹಾಗೂ ಶಕ್ತಿವರ್ಧಕ ಪಾನೀಯಗಳನ್ನು ಆಗಾಗ ಸೇವಿಸುವುದು ಲೇಸು.
  • ದ್ರಾಕ್ಷಿ, ಸೇಬು, ಬಾಳೆಹಣ್ಣು, ಸಪೋಟ, ಕಲ್ಲಂಗಡಿ, ಕರಬೂಜ, ಜಂಬು ನೇರಳೆ, ಹಲಸು, ಅನಾನಸ್, ಮಾವು ಇವುಗಳಲ್ಲಿ ಯಾವುದಾದರೂ ಒಂದರ ರಸಕ್ಕೆ ಸಕ್ಕರೆ, ಹಾಲು ಹಾಕಿ ಕುಡಿಯುವುದು ಒಳ್ಳೆಯದು.
  • ಐಸ್‌ಕ್ರೀಂ ಮುಂತಾದ ತೀರ ತಣ್ಣನೆಯ ಪದಾರ್ಥಗಳನ್ನು ಸೇವಿಸಿದರೂ ಹೆಚ್ಚು ಉಪದ್ರವ ಇರುವುದಿಲ್ಲ. ಇದನ್ನು ಒಣ ಅಥವಾ ತಾಜಾ ಹಣ್ಣುಗಳೊಡನೆ ಸೇವಿಸಿದರೆ ಹೆಚ್ಚಿನ ಶಕ್ತಿ ದೊರೆಯುತ್ತದೆ.
  • ಶೀತ ಕಾಲದ ಕಾಯಿಲೆಗಳಾದ ನೆಗಡಿ. ಆಸ್ತ್ರ, ಕೆಮ್ಮುಗಳಿಂದ ನರಳುವ ಮಕ್ಕಳು ತಮ್ಮ ನೆಚ್ಚಿನ ಐಸ್ಕ್ರೀಂ ಮತ್ತು ಹಣ್ಣು-ಹಂಪಲುಗಳಿಂದ ವಂಚಿತರಾಗಿರುತ್ತಾರೆ. ಅಂಥವರೂ ಈ ಋತುವಿನಲ್ಲಿ ಅವುಗಳನ್ನು ತಿಂದು ಆನಂದಿಸಬಹುದು.
  • ಮನೆಯಲ್ಲಿ ತಯಾರಿಸಿದ ರಾಗಿ ಹುರಿಹಿಟ್ಟಿನ ಪಾನೀಯ, ಅಕ್ಕಿ ಹುರಿಹಿಟ್ಟಿನ ಪಾನೀಯಗಳನ್ನು ಸೇವಿಸಬಹುದು.
  • ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಾಗಿದ್ದು, ಇವು ಸಾಮಾನ್ಯವಾಗಿ ಈ ಋತುವಿನಲ್ಲಿ ಕಂಡು ಬರುವ ಉಪದ್ರವಗಳನ್ನು ಯಶಸ್ವಿಯಾಗಿ ನಿವಾರಿಸುತ್ತವೆ.
  • ಲಸ್ಸಿಯು ಗ್ರೀಷ್ಮಋತುವಿನ ಉಪದ್ರವಗಳನ್ನು ನಿವಾರಿಸಲು ಉತ್ತಮ ಆಹಾರ ಪದಾರ್ಥ. ಇದನ್ನು ಅವರವರ ನಾಲಿಗೆ ರುಚಿಗೆ ತಕ್ಕಂತೆ ಸಿಹಿಯಾಗಿ ಅಥವಾ ಖಾರವಾಗಿ ಸೇವಿಸಬಹುದು.
  • ಆಹಾರದೊಡನೆ ತುಪ್ಪ, ಹಾಲನ್ನು ಧಾರಾಳವಾಗಿ ಸೇವಿಸಬಹುದು.
  • ಈ ಋತುವಿನಲ್ಲಿ ಅತ್ಯಂತ ಶ್ರೇಷ್ಠವಾದ ಆಹಾರವೆಂದರೆ ಪಾಯಸ. ಗ್ರೀಷ್ಮ ಋತುವಿನ ಎಲ್ಲ ಕೆಟ್ಟ ಪರಿಣಾಮಗಳನ್ನು ನಿಗ್ರಹಿಸುವ ಗುಣ ಅದರಲ್ಲಿದೆ.
  • ಧಾನ್ಯಗಳಲ್ಲಿ ಅಕ್ಕಿ, ಗೋಧಿಗಳ ಬಳಕೆ ಒಳ್ಳೆಯದು. ಬೇಳೆಗಳಲ್ಲಿ ಹೆಸರು ಬೇಳೆ, ಉದ್ದು ಮತ್ತು ಮಸೂರ್ ಬೇಳೆಗಳ ಬಳಕೆ ಲೇಸು.
  • ಖಾರ, ಒಗರು ಮತ್ತು ಕಹಿ ಪದಾರ್ಥಗಳನ್ನು ಬಳಸುವುದು ಬೇಡ. ಅಂದರೆ ಹಾಗಲಕಾಯಿ, ಅಡಿಕೆ, ಮೆಣಸಿನಕಾಯಿ, ಮೂಲಂಗಿ, ನುಗ್ಗೆಕಾಯಿ, ಪಡವಲ ಕಾಯಿ, ಹೀರೆಕಾಯಿ ಮುಂತಾದವುಗಳ ಬಳಕೆ ತೀರ ಕಡಿಮೆ ಇರಲಿ.
  • ಮಧ್ಯಾಹ್ನ ವ್ಯಾಯಾಮ ಮಾಡುವುದು ಬೇಡ (ಜಿಮ್‌ಗಳಲ್ಲಿ ಮಧ್ಯಾಹ್ನ ವ್ಯಾಯಾಮ ಮಾಡುವವರಿಗೆ ಇದು ಕಿವಿ ಮಾತು).
  • ಈ ಋತುವಿನಲ್ಲಿ ಮಾತ್ರ ಆಯುರ್ವೇದ ಹಗಲು ಹೊತ್ತು ನಿದ್ದೆ ಮಾಡಲು ಆಕ್ಷೇಪಿಸುವುದಿಲ್ಲ. ಅತಿಯಾದ ಉಷ್ಣತೆಯಿಂದ ದುರ್ಬಲತೆ ತಲೆದೋರುತ್ತದೆ. ಹಗಲು ನಿದ್ದೆಯು ಶಾರೀರಿಕ ಕಫ ಗುಣವನ್ನು ಹೆಚ್ಚಿಸುವುದರಿಂದ ಹಗಲು ನಿದ್ದೆ ಮಾಡಬಹುದು.
  • ಮನೆಯಲ್ಲಿ ತಂಪಾಗಿರುವ ಕೊಠಡಿಯಲ್ಲಿ ಇರುವುದು ಒಳಿತು. ವಾಸಿಸುವ ಜಾಗ ತುಂಬಾ ಬಿಸಿಲಿನಿಂದ ಕೂಡಿದ್ದರೆ, ಬೇಸಿಗೆ ಕಳೆಯುವವರೆಗೆ ತಂಪಾದ ಪ್ರದೇಶಗಳಿಗೆ ಹೋಗಿ ವಾಸವಾಗುವುದು ಒಳ್ಳೆಯದು.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *