10,936 Students fail in SSLC Preliminary Exam-1 in Dharwad Districtಸಾಂದರ್ಭಿಕ ಚಿತ್ರ

ಹುಬ್ಬಳ್ಳಿ, ಫೆಬ್ರವರಿ 27: ಈ ವರ್ಷ ಧಾರವಾಡ (Dharwad) ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆ-1ರಲ್ಲಿ (SSLC Preliminary Exam-1)  ವಿದ್ಯಾರ್ಥಿಗಳ ಫಲಿತಾಂಶ ತೃಪ್ತಿಕರವಾಗಿರಲಿಲ್ಲ. ಒಟ್ಟು 26,270 ವಿದ್ಯಾರ್ಥಿಗಳಲ್ಲಿ 10,936 ಮಂದಿ ಅನುತ್ತೀರ್ಣರಾಗಿದ್ದು, ಇದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಆತಂಕಕ್ಕೆ ಕಾರಣವಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಅಗ್ರ ಸ್ಥಾನ ಪಡೆಯುವ ಗುರಿಯನ್ನು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಇಲಾಖೆ ಹೊಂದಿರುವುದರಿಂದ ಈ ಫಲಿತಾಂಶ ಗಮನ ಸೆಳೆದಿದೆ. ಪೂರ್ವಭಾವಿ ಪರೀಕ್ಷೆ-1ರಲ್ಲಿ ಹಾಜರಾದವರಲ್ಲಿ 6,769 ಬಾಲಕರು ಮತ್ತು 4,167 ಬಾಲಕಿಯರು ಅನುತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಯ ಉತ್ತೀರ್ಣ ಪ್ರಮಾಣ 58.3% ಆಗಿದೆ. ಎರಡನೇ ಪೂರ್ವಭಾವಿ ಪರೀಕ್ಷೆಯಲ್ಲಿ 19,013 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಮೂರನೇ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ.

ಈ ಸಂಬಂಧ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ಅಶೋಕ್ ಸಜ್ಜನ್ ಟೈಮ್ಸ್‌ ಆಫ್‌ ಇಂಡಿಯಾ ಜೊತೆ ಮಾತನಾಡಿ, “ವಿದ್ಯಾರ್ಥಿಗಳ ಜೀವನದ ಮಹತ್ವದ ಹಂತವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈಗಿನಿಂದಲೇ ಕೌಂಟ್‌ಡೌನ್ ಆರಂಭವಾಗಿದೆ. ಈ ಬಾರಿ ಫಲಿತಾಂಶದಲ್ಲಿ ಗಮನಾರ್ಹ ಸುಧಾರಣೆ ತರಲು ಇಲಾಖೆ ‘ಮಿಷನ್ ವಿದ್ಯಾಕಾಶಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ಶಾಲೆಗಳ ದತ್ತು ಸ್ವೀಕಾರ ಸೇರಿದಂತೆ ಹಲವು ಚಟುವಟಿಕೆಗಳು ನಡೆದರೂ ಪೂರ್ಣ ಪ್ರಮಾಣದ ಫಲಿತಾಂಶ ಸಿಗಲಿಲ್ಲ. ಆದರೂ ಇಲಾಖೆ ಮತ್ತು ಮುಖ್ಯೋಪಾಧ್ಯಾಯರು ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ವಿಶೇಷ ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆ. ಹಿಂದೆ ಧಾರವಾಡ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅಗ್ರ ಸ್ಥಾನಗಳಲ್ಲಿ ಇತ್ತು. ಈ ಬಾರಿ ಉತ್ತಮ ಫಲಿತಾಂಶ ನಿರೀಕ್ಷಿಸುತ್ತೇವೆ. ಇನ್ನೂ ವಿದ್ಯಾರ್ಥಿಗಳ ಸಾಧನೆಯನ್ನು ಹೆಚ್ಚಿಸಲು ಸಮಯ ಇದೆ,” ಎಂದರು.

ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಮಾತನಾಡಿ, ಮೊದಲ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿ ಕೈಗೊಂಡ ಕ್ರಮಗಳ ಫಲವಾಗಿ, ಎರಡನೇ ಪೂರ್ವಭಾವಿ ಪರೀಕ್ಷೆಯಲ್ಲಿ 19,013 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 26,270 ವಿದ್ಯಾರ್ಥಿಗಳಲ್ಲಿ 7,230 ಮಂದಿ ಅನುತ್ತೀರ್ಣರಾಗಿದ್ದು, ಉತ್ತೀರ್ಣ ಪ್ರಮಾಣ 72.4%ಕ್ಕೆ ಏರಿಕೆಯಾಗಿದೆ. ‘ಮಿಷನ್-40’ ಯೋಜನೆಯಡಿ 25ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ, ಕನಿಷ್ಠ 40 ಅಂಕ ಪಡೆಯುವಂತೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅನುತ್ತೀರ್ಣರಾದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಪರಿಶೀಲನೆ ಮಾಡಿ, ಅವರು ಯಾವ ವಿಷಯಗಳಲ್ಲಿ ಮತ್ತು ಯಾವ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾಗಿದ್ದಾರೆ ಎಂಬುದನ್ನು ಗುರುತಿಸಿ ವಿಶೇಷ ಮಾರ್ಗದರ್ಶನ ನೀಡಲಾಗುತ್ತಿದೆ. “ಪೂರ್ವಭಾವಿ ಪರೀಕ್ಷೆ-1ರೊಂದಿಗೆ ಹೋಲಿಸಿದರೆ ಪರೀಕ್ಷೆ-2ರಲ್ಲಿ ಫಲಿತಾಂಶ ಹೆಚ್ಚಾಗಿದೆ. ಈಗ ಮೂರನೇ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸವಿದೆ,” ಎಂದು ಡಿಡಿಪಿಐ ಷಣ್ಮುಖಸ್ವಾಮಿ ಕೇಳದಿಮಠ ತಿಳಿಸಿದ್ದಾರೆ.

ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ನಫೀಸಾ ಬಾನು ದವಲಾಸಾಬ್ ಮಾತನಾಡಿ, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಫಲಿತಾಂಶ ಸುಧಾರಣೆಗೆ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಲಾಗಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಆರು ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದ್ದು, ಶಾಲಾ ಶಿಕ್ಷಕರು ಅಭ್ಯಾಸ ಕಾರ್ಯದ ಮೂಲಕ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು ತಿಳಿಸಿದ್ದಾರೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *