ಹುಬ್ಬಳ್ಳಿ, ಏಪ್ರಿಲ್ 14: ರಾಜ್ಯದಲ್ಲಿ ಈಗಾಗಲೆ ಹಲವು ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಇದೀಗ, ಕರ್ನಾಟಕದಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸಪ್ರೆಸ್ ರೈಲು ಸಂಚರಿಸಲಿದೆ. ಹೌದು, ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಎಕ್ಸಪ್ರೆಸ್ ರೈಲು ಸಂಚರಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅನುಮತಿ ನೀಡಿದ್ದಾರೆ. ಈ ಮೂಲಕ ರಾಜ್ಯ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬೆಂಗಳೂರು ಮತ್ತು ಮುಂಬೈ ಮಧ್ಯೆ ಸಂಚಾರ ಮಾಡುವವರಿಗೆ ಇದು ಅನುಕೂಲವಾಗಲಿದೆ. ಅನೇಕರು ಈ ಮಾರ್ಗದಲ್ಲಿ ಸದಾ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ, ಬೆಂಗಳೂರು-ಮುಂಬೈ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಮಾಡಬೇಕು ಎಂಬ ಬೇಡಿಕೆ ಇತ್ತು. ಇದೀಗ ಅನುಮೋದನೆ ಸಿಕ್ಕಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದು, ಹೊಸದಾಗಿ ಅನುಮೋದಿಸಲಾದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲ್ಯಾಣ ಕರ್ನಾಟಕ ಮಾರ್ಗದ ಮೂಲಕ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. ಈ ರೈಲು ಕೆಎಸ್ಆರ್ ಬೆಂಗಳೂರಿನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ಗೆ ಕಲ್ಯಾಣ ಕರ್ನಾಟಕದ ಪ್ರಮುಖ ಭಾಗಗಳ ಮೂಲಕ ಹಾದುಹೋಗುತ್ತದೆ, ಆದರೆ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮೂಲಕ ಈ ಹಿಂದೆ ಅನುಮೋದಿಸಲಾದ ಬೆಂಗಳೂರು-ಮುಂಬೈ ಸೂಪರ್ಫಾಸ್ಟ್ ರೈಲನ್ನು ಭವಿಷ್ಯದಲ್ಲಿ ವಂದೇ ಭಾರತ್ ಸ್ಲೀಪರ್ ಆಗಿ ಮೇಲ್ದರ್ಜೆಗೇರಿಸಲು ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಕ್ರಮವು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ, ವಾಣಿಜ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಪ್ರಯಾಣ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಹೇಳಿದರು. ಕಲಬುರಗಿ ಮೂಲಕ ರೈಲು ಸಂಚರಿಸಲಿದೆ. ಏಕೆಂದರೆ ಇದು ಕಡಿಮೆ ಸಮಯದ ಮಾರ್ಗವಾಗಿದೆ. ಪ್ರಯಾಣದ ಸಮಯ ಕನಿಷ್ಠ 16 ಗಂಟೆಗಳಿರುತ್ತದೆ ಎಂದು ಎಂದು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಅವರು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್ಗೆ ತಿಳಿಸಿದ್ದಾರೆ. ಭಾರತದ ಎರಡು ಪ್ರಮುಖ ನಗರಗಳನ್ನು ಸೂಪರ್ಫಾಸ್ಟ್ ರೈಲಿನ ಮೂಲಕ ಸಂಪರ್ಕಿಸುವ ಬಹುಕಾಲದ ಬೇಡಿಕೆ ಈಡೇರಿದೆ. ಪ್ರಸ್ತುತ, ಕೇವಲ ಒಂದು ರೈಲು (ಉದಯಾನ್ ಎಕ್ಸ್ಪ್ರೆಸ್) ಈ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಇದು ಸುಮಾರು 24 ಗಂಟೆಗಳಲ್ಲಿ 1,136 ಕಿ.ಮೀ.ಗಳನ್ನು ಕ್ರಮಿಸುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ಎಕ್ಸಪ್ರೆಸ್ ರೈಲು ಜುಲೈ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಹೊಚ್ಚ ಹೊಸ ಬೋಗಿಗಳನ್ನು ಸಿದ್ಧಪಡಿಸಲಾಗುತ್ತಿದೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕರ್ನಾಟಕ ಸೇರಿದಂತೆ ದೇಶದಲ್ಲಿ 16,087 ಕೋಟಿ ರೂ. ಕಬ್ಬು ಪಾವತಿ ಬಾಕಿ ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಏರೋಸ್ಪೇಸ್ ಕ್ಷೇತ್ರದಲ್ಲಿ 1,356 ಕೋಟಿ ರೂ. ಹೂಡಿಕೆ, 1,350 ಉದ್ಯೋಗ ಸೃಷ್ಟಿ