Government of India emergency alert cell broadcast systemಮರ್ಜೆನ್ಸಿ ಅಲರ್ಟ್‌

ನವದೆಹಲಿ, ಮೇ 3: ದೇಶದ ಕೋಟ್ಯಂತರ ಮೊಬೈಲ್‌ ಬಳಕೆದಾರರಿಗೆ ಶನಿವಾರ (ಮೇ. 02) ಏಕಾಏಕಿ ಎಮರ್ಜೆನ್ಸಿ ಅಲರ್ಟ್‌ ಸಂದೇಶಗಳು ಬಂದಿವೆ. ಫೋನ್‌ಗಳು ಜೋರಾಗಿ ಶಬ್ದ ಮಾಡುತ್ತಾ ಕಂಪಿಸಲು ಆರಂಭಿಸಿದ್ದರಿಂದ ಬಳಕೆದಾರರು ಆತಂಕಗೊಂಡಿದ್ದರು. ಆತಂಕಪಡುವ ಅವಶ್ಯಕತೆ ಇಲ್ಲ. ತುರ್ತು ಸಂದರ್ಭ ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ನೀಡುವ ʼಸೆಲ್‌ ಬ್ರಾಡ್‌ಕಾಸ್ಟಿಂಗ್‌ ಅಲರ್ಟ್‌ʼ ಇದಾಗಿದೆ.

ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶನಿವಾರ ಸೆಲ್‌ ಬ್ರಾಡ್‌ಕಾಸ್ಟಿಂಗ್‌ ಅಲರ್ಟ್‌ ಪ್ರಾರಂಭಿಸಿದರು. ಇದರ ನಂತರ ಪ್ರಾಯೋಗಿಕವಾಗಿ ದೇಶಾದ್ಯಂತ ಜನರ ಮೊಬೈಲ್‌ ಫೋನ್‌ಗಳಲ್ಲಿ ಎಚ್ಚರಿಕೆ ಸಂದೇಶ ಮೊಳಗಿತು.

ಸೇವೆಯ ಪ್ರಾಯೋಗಿಕ ಚಾಲನೆಯ ಬಗ್ಗೆ ಏಪ್ರಿಲ್‌ 29ರಂದು ಮಾಹಿತಿ ನೀಡಿದ್ದ ಟೆಲಿಕಾಂ ಇಲಾಖೆಯು, ಎಚ್ಚರಿಕೆಯನ್ನು ನಿರ್ಲಕ್ಷಿಸುವಂತೆ ಮತ್ತು ಆತಂಕಪಡದಂತೆ ಮನವಿ ಮಾಡಿತ್ತು.

ಪ್ರಾಯೋಗಿಕ ಎಚ್ಚರಿಕೆ ಸಂದೇಶದಲ್ಲಿ, ʼತೀವ್ರವಾದ ಎಚ್ಚರಿಕೆ. ವಿಪತ್ತಿನ ಕುರಿತು ತ್ವರಿತವಾಗಿ ಎಚ್ಚರಿಸಲು ಭಾರತವು ತನ್ನ ನಾಗರಿಕರಿಗಾಗಿ ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ಸೆಲ್‌ ಬ್ರಾಡ್‌ಕಾಸ್ಟ್‌ಗೆ ಚಾಲನೆ ನೀಡಿದೆ. ಜಾಗೃತ ನಾಗರಿಕರಿದ್ದರೆ ರಾಷ್ಟ್ರ ಸುರಿಕ್ಷಿತ. ಈ ಸಂದೇಶ ಸ್ವೀಕರಿಸಿದವರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಇದು ಪ್ರಾಯೋಗಿಕ ಸಂದೇಶವಷ್ಟೆ- ಭಾರತ ಸರ್ಕಾರʼ ಎಂದು ಬರೆಯಲಾಗಿದೆ.

ಮೊಬೈಲ್‌ಗಳಿಗೆ ಬಂದ ‘ಎಮರ್ಜೆನ್ಸಿ ಅಲರ್ಟ್’ ಸಂದೇಶವು ಕೇಂದ್ರ ಸರ್ಕಾರದ ಹೊಸ ‘ಸೆಲ್ ಬ್ರಾಡ್‌ಕಾಸ್ಟ್’ ವ್ಯವಸ್ಥೆಯ ಅಧಿಕೃತ ಪರೀಕ್ಷೆಯಾಗಿದೆ. ‘ಸಚೇತ್’ (SACHET) ಎಂಬ ಈ ಸ್ವದೇಶಿ ತಂತ್ರಜ್ಞಾನವನ್ನು DoT ಮತ್ತು C-DOT, NDMA ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿವೆ. ಭೂಕಂಪ, ಸುನಾಮಿಯಂತಹ ವಿಪತ್ತುಗಳಲ್ಲಿ ಜನರನ್ನು ತಕ್ಷಣ ಎಚ್ಚರಿಸುವುದು ಇದರ ಉದ್ದೇಶವಾಗಿದೆ.  

ಚುನಾವಣೆ ನಡೆಯಲಿರುವ ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಎಲ್ಲ ಟೆಲಿಕಾಂ ಆಪರೇಟರ್‌ಗಳ ನೆಟ್‌ವರ್ಕ್‌ನಲ್ಲಿ ಎಚ್ಚರಿಕೆ ಸಂದೇಶವನ್ನು ಕಳುಹಿಸಲಾಗಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *